Showing posts with label Vegetarian break fast. Show all posts
Showing posts with label Vegetarian break fast. Show all posts

Monday, July 25, 2022

ಮದ್ದೂರು ಶಿವಪುರದ ಶ್ರೀ ರಾಘವೇಂದ್ರ ಭವನದಲ್ಲಿ ತಿನಿಸುಗಳ ರುಚಿ ಸೂಪರ್!

- ಬಿ.ವಿ.ಎಸ್‍

ನಮ್ಮದೊಂದು ಭಾನುವಾರದ ತಿಂಡಿಪೋತರ ತಂಡವಿದೆ. ಭಾನುವಾರ ಬೆಳಿಗ್ಗೆ ಹೋಟೆಲ್‍ಗಳಲ್ಲಿ ತಿಂಡಿ ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದೇವೆ.  ರಾಮನಗರವಲ್ಲದೆ ಹತ್ತಿರದ ಊರುಗಳಿಗೆ ತಿಂಡಿಯ ರುಚಿ ಸವಿಯಲೆಂದೇ ಹೋಗುವುದುಂಟು.  ಹೋಟೆಲ್‍ಗಳ ಬಗ್ಗೆ ಸ್ನೇಹಿತರು, ಪರಿಚಯಸ್ಥರ ಬಳಿ ಅನ್ವೇಷಣೆ ನಡೆಸುವ ಗುಂಪಿನ ಸದಸ್ಯರು ಹೋಟೆಲ್‍ಗಳ ಶಿಪಾರಸ್ಸು ಮಾಡುತ್ತಾರೆ. ಅಂತಿಮವಾಗಿ ಒಂದು ಹೋಟೆಲ್‍ ನಿರ್ಧಾರವಾಗುತ್ತದೆ.  ಶನಿವಾರ ಸಂಜೆ ವೇಳೆಗೆ ಯಾವ ಹೋಟೆಲ್‍, ಯಾರು ಬರ್ತಾರೆ? ಎಂಬುದೆಲ್ಲ ನಿಗಧಿ ಮಾಡಿಕೊಳ್ಳಲು ವಾಟ್ಸಪ್‍ ಗುಂಪು ಮಾಡಿಕೊಂಡಿದ್ದೇವೆ.

ರಾಮನಗರದ ಅಡಿಗಾ ರೆಸ್ಟೋರೆಂಟ್‍ನಲ್ಲಿ ಬೈಟು ಕಾಫಿ ಹೀರುವ ಮೂಲಕ ನಿತ್ಯ ನಮ್ಮ ದಿನ ಆರಂಭವಾಗುತ್ತದೆ. ಭಾನುವಾರ ಇದಕ್ಕೆ ಹೊರತೇನಲ್ಲ. 2022ರ ಜುಲೈ 24ರ ಭಾನುವಾರ ಮದ್ದೂರು ಶಿವಪುರದ ಹಳೇ ಕೊಪ್ಪ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಭವನ – ಫಲಹಾರ ಮಂದಿರದಲ್ಲಿ ತಿಂಡಿ ತಿನ್ನುಲು ನಿರ್ಧಾರವಾಗಿತ್ತು. ಅಂತೆಯೇ ಅಂದು ಬೆಳಿಗ್ಗೆ ಅಡಿಗಾ ಹೋಟೆಲ್‍ನಲ್ಲಿ ಕಾಫಿ ಹೀರಿದ ನಂತರ ಸ್ನೇಹಿತ ನಾಗರಾಜ್‍ ಅವರ ಇನ್ನೋವಾ ಕಾರಿನಲ್ಲಿ ಶಿವಪುರದ ಶ್ರೀ ರಾಘವೇಂದ್ರ ಭವನಕ್ಕೆ ಹೋಗಿದ್ದೆವು.  ಹೋಟೆಲ್‍ ಮಾಲೀಕರ ಪ್ರಕಾರ 63 ವರ್ಷಗಳ ಹಿಂದೆ ಹೋಟೆಲ್‍ ಆರಂಭವಾಗಿ ನಾಗರೀಕರ ಪ್ರಶಂಸೆಗಳಿಸಿದೆ. ಮಂಡ್ಯ ಭಾಗದ ಖ್ಯಾತನಾಮರು, ರಾಜಕೀಯ ಪ್ರಮುಖರು ಆಗಾಗ್ಗೆ ಇಲ್ಲಿ ಫಲಹಾರ ಸವಿಯುತ್ತಾರೆ ಎಂದು ಅಲ್ಲಿನ ಗ್ರಾಹಕರು ತಿಳಿಸಿದರು.

ಪ್ರತಿದಿನ ಬೆಳಿಗ್ಗೆ ಇಡ್ಲಿ, ಉದ್ದಿನ ವಡೆ, ಮಸಾಲೆ ದೋಸೆ, ಸೆಟ್‍ ದೋಸೆ, ಖಾಲಿ ದೋಸೆ, ಬೆಣ್ಣೆ ದೋಸೆ, ಚೌ ಚೌ ಬಾತ್‍ ಸಿಗುತ್ತದೆ. ಪ್ರತಿ ದಿನ ಒಂದೊಂದು ರೀತಿಯ ರೈಸ್‍ ಬಾತ್‍ ಮಾಡುತ್ತಾರೆ. ಮಧ್ಯಾಹ್ನ  ಚಪಾತಿ, ಅನ್ನ ಸಾಂಬರ್‍, ಮೊಸರನ್ನ ತಯಾರಿಸುತ್ತಿದ್ದಾರೆ.

ಶಿವಪುರದಲ್ಲಿ ಹಳೆಯ ಹೋಟೆಲ್‍ ಇದಾಗಿದ್ದು,  ಒಳಾಂಗಣದಲ್ಲಿ ತನ್ನ ಸಾಂಪ್ರದಾಯಿಕತೆಯನ್ನು ಕಾಪಾಡಿಕೊಳ್ಳಲಾಗಿದೆ. ಇಲ್ಲಿ ಕುಳಿತು ತಿನ್ನಲು ಟೇಬಲ್‍, ಕುರ್ಚಿ, ನಿಂತು ಸವಿಯಲು ಟೇಬಲ್‍ ವ್ಯವಸ್ಥೆ ಇದೆ. ಬೆಳಿಗ್ಗೆ 6.30ರ ವೇಳೆಗೆಲ್ಲ ಕಾಫಿ, ಟೀ, ಇಡ್ಲಿ-ವಡೆ ಸಾಂಬರ್‍ ಸಿದ್ದ. ಕ್ರಮೇಣ ಉಳಿದೆಲ್ಲ ತಿಂಡಿಗಳು ಲಭ್ಯವಾಗುತ್ತದೆ.

ಮಸಾಲೆ ದೋಸೆ ಸೂಪರ್‍!

ಮಸಾಲೆ ದೋಸೆ ರುಚಿ ನಮ್ಮನ್ನು ಸೆಳೆಯಿತು. ಮಸಾಲೆ ದೋಸೆಗೆ ಹಚ್ಚಿದ್ದ ಕೆಂಪು ಚಟ್ನಿ ರುಚಿ ಹೆಚ್ಚಿಸಿತ್ತು. ತ್ರಿಕೋಣಾಕಾರದ ಗರಿ ಗರಿಯ ಮಸಾಲೆ ದೋಸೆಯ ಮಧ್ಯೆ ಆಲೂಗೆಡ್ಡೆ ಪಲ್ಯ ಧಾರಾಳವಾಗಿತ್ತು. ಬೆಣ್ಣೆಯೊಂದಿಗೆ ಮಸಾಲೆ ದೋಸೆ ಸವಿದರೆ ರುಚಿ ಡಬ್ಬಲ್‍!

ಸೆಟ್‍ ದೋಸೆ, ಬಿಸಿಬೇಳೆ ಬಾತ್‍ (ಭಾನುವಾರದ ರೈಸ್‍ ಬಾತ್‍ ವಿಶೇಷ), ಚೌ, ಚೌ ಬಾತ್‍, ಇಡ್ಲಿ – ವಡೆ – ಸಾಂಬರ್‍ ರುಚಿಕರವಾಗಿತ್ತು. (ಎಲ್ಲರೂ ಶೇರ್‍ ಮಾಡಿಕೊಂಡು ತಿಂದ್ದದ್ದು)  ಕಾಫಿ ಕೂಡ ಚೆನ್ನಾಗಿತ್ತು. 

ಮದ್ದೂರಿನ ಕಡೆ ನೀವು ಹೋದರೆ ಟ್ರೈ ಮಾಡಿ.  ಬೆಲೆಗಳು ವಿಪರೀತವೇನಿಲ್ಲ!

ತಿನ್ನೋಕೆ ಮಾತ್ರ ಸೀಮಿತವಲ್ಲ!

ಮದ್ದೂರಿಗೆ ಹೋಗಿದ್ದ ನಾವು ಅಲ್ಲಿನ ಉಗ್ರ ನರಸಿಂಹ ಸ್ವಾಮಿ ದೇವಾಲಯ, ವರದರಾಜ ಸ್ವಾಮಿ ದೇವಾಲಯ, ಹೊಳೆ ಆಂಜನೇಯಸ್ವಾಮಿ ದೇವಾಲಯ, ವರಪ್ರದ ಶ್ರೀನಿವಾಸ ಸ್ವಾಮಿ ದೇವಾಲಯಗಳಿಗೂ ತೆರಳಿ ಪ್ರಾರ್ಥಿಸಿದೆವು.

ಶ್ರೀ ರಾಘವೇಂದ್ರ ಭವನಕ್ಕೆ ಗೂಗಲ್ ಮ್ಯಾಪ್ ಲಿಂಕ್:https://maps.app.goo.gl/uUbGHfeB899Z3iSMA

..............